ಥ್ರೀ ಇಡಿಯಟ್ಸ್ ರಾಜ್‍ಕುಮಾರ್ ಹಿರಾನಿ ನಿರ್ದೇಶಿಸಿದ, ಅಭಿಜಾತ್ ಜೋಶಿ ಚಿತ್ರಕಥೆ ಬರೆದ, ಮತ್ತು ವಿಧು ವಿನೋದ್ ಚೋಪ್ರಾ ನಿರ್ಮಿಸಿದ, ೨೦೦೯ರ ಪ್ರೌಢತ್ವಕ್ಕೆ ಪರಿವರ್ತನೆಯಾಗುವ ವಸ್ತುವುಳ್ಳ ಒಂದು ಭಾರತೀಯ ಹಾಸ್ಯಮಯ ನಾಟಕೀಯ ಚಲನಚಿತ್ರ. ಇದು ಸಡಿಲವಾಗಿ ಚೇತನ್ ಭಗತ್‍ರ ಕಾದಂಬರಿ ಫೈವ್ ಪಾಯಿಂಟ್ ಸಮ್‍ವನ್ ಅನ್ನು ಆಧರಿಸಿದೆ. ಥ್ರೀ ಇಡಿಯಟ್ಸ್ನ ತಾರಾಗಣದಲ್ಲಿ ಆಮಿರ್ ಖಾನ್, ಕರೀನಾ ಕಪೂರ್, ಆರ್. ಮಾಧವನ್, ಶರ್ಮನ್ ಜೋಶಿ, ಓಮಿ ವೈದ್ಯ, ಪರೀಕ್ಷಿತ್ ಸಾಹ್ನಿ ಮತ್ತು ಬಮನ್ ಇರಾನಿ ಇದ್ದಾರೆ. ಈ ಚಿತ್ರವು ಒಂದು ಭಾರತೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಮೂರು ವಿದ್ಯಾರ್ಥಿಗಳ ಸ್ನೇಹದ ಬಗ್ಗೆ ಆಗಿದೆ ಮತ್ತು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸಾಮಾಜಿಕ ಒತ್ತಡಗಳ ಬಗ್ಗೆ ವಿಡಂಬನೆಯಾಗಿದೆ. ಚಲನಚಿತ್ರವನ್ನು ಸಮಾನಾಂತರದ ರೂಪಕಗಳ ಮೂಲಕ ನಿರೂಪಿಸಲಾಗಿದೆ, ಒಂದು ವರ್ತಮಾನದಲ್ಲಿ ಮತ್ತು ಇನ್ನೊಂದು ಹತ್ತು ವರ್ಷದ ಹಿಂದಿನದಾಗಿ. ಈ ಚಿತ್ರವು ನೈಜ ಭಾರತೀಯ ಆವಿಷ್ಕಾರಗಳನ್ನೂ ಒಳಗೊಂಡಿದೆ, ಅವೆಂದರೆ ರೆಮ್ಯಾ ಜೋಸ್, ಮೊಹಮ್ಮದ ಇದ್ರಿಸ್, ಜಹಾಂಗೀರ್ ಪೇಂಟರ್ ಮತ್ತು ಸೋನಮ್ ವಾಂಗ್‍ಚುಕ್ ಸೃಷ್ಟಿಸಿದವುಗಳು. ಈ ಚಿತ್ರ ೨೦೦ ಕೋಟಿಗಿಂತಲೂ ಅಧಿಕ ಹಣ ಗಳಿಸಿ ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ವಿನೋದ್ ಚೋಪ್ರಾ ಫ಼ಿಲ್ಮ್ಸ್ ಲಾಂಛನದಡಿ ವಿಧು ವಿನೋದ್ ಚೋಪ್ರಾ ನಿರ್ಮಿಸಿದ ಥ್ರೀ ಇಡಿಯಟ್ಸ್ ೨೫ ಡಿಸೆಂಬರ್ ೨೦೦೯ರಲ್ಲಿ ಬಿಡುಗಡೆಯಾದ ಮೇಲೆ ವ್ಯಾಪಕ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸನ್ನು ಪಡೆಯಿತು. ಇದು ಆ ಕಾಲದಲ್ಲಿ ಚೀನಾ ಮತ್ತು ಜಪಾನ್‍ನಂತಹ ಪೂರ್ವ ಏಷ್ಯಾದ ಮಾರುಕಟ್ಟೆಗಳಲ್ಲಿ ಯಶಸ್ವಿಯಾದ ಕೆಲವೇ ಭಾರತೀಯ ಚಿತ್ರಗಳಲ್ಲಿ ಒಂದೆನಿಸಿತು. ಅಂತಿಮವಾಗಿ ಇದರ ವಿಶ್ವಾದ್ಯಂತ ಸಂಪಾದನೆ ೩೯೨ ಕೋಟಿ ರೂಪಾಯಿಗಳಾಯಿತು{{|=|3 : ₹459.962 ($90 )—ಆ ಕಾಲದಲ್ಲಿ ಇದು ಸಾರ್ವಕಾಲಿಕವಾಗಿ ಅತ್ಯಂತ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರವಾಗಿತ್ತು. ಚಿತ್ರವು ಭಾರತದಲ್ಲಿನ ಶಿಕ್ಷಣದ ಬಗ್ಗೆ ಮನೋಭಾವಗಳ ಮೇಲೆ ಸಾಮಾಜಿಕ ಪ್ರಭಾವವನ್ನು ಹೊಂದಿತ್ತು. ಈ ಚಿತ್ರವು ಅತ್ಯುತ್ತಮ ಚಲನಚಿತ್ರ ಸೇರಿದಂತೆ ಆರು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದಿತು ಮತ್ತು ಅತ್ಯುತ್ತಮ ಜನಪ್ರಿಯ ಚಲನಚಿತ್ರ ಸೇರಿದಂತೆ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿತು. ವಿದೇಶದಲ್ಲಿ, ಇದು ಜಪಾನ್‍ನ ವೀಡಿಯೊಯಾಸಾನ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುಚ್ಚ ಪ್ರಶಸ್ತಿಯನ್ನು ಗೆದ್ದಿತು ಮತ್ತು ಜಪಾನ್ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರಕ್ಕೆ ಹಾಗೂ ಬೆಯ್ಜಿಂಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ವಿದೇಶಿ ಚಲನಚಿತ್ರಕ್ಕೆ ನಾಮನಿರ್ದೇಶನಗೊಂಡಿತ್ತು. ಈ ಚಿತ್ರವನ್ನು ತಮಿಳಿನಲ್ಲಿ ನಾನ್ಬನ್ (೨೦೧೨) ಎಂದು ರೀಮೇಕ್ ಮಾಡಲಾಯಿತು ಮತ್ತು ಇದು ಕೂಡ ವಿಮರ್ಶಾತ್ಮಕ ಮೆಚ್ಚುಗೆ ಹಾಗೂ ವಾಣಿಜ್ಯಿಕ ಯಶಸ್ಸನ್ನು ಪಡೆಯಿತು. ನಾನ್ಬನ್ ಅನ್ನು ತೆಲುಗಿನಲ್ಲಿ ಸ್ನೇಹಿತುಡು ಎಂಡು ಡಬ್ ಮಾಡಲಾಗಿತ್ತು. ಮೆಕ್ಸಿಕನ್ ಭಾಷೆಯ ರೀಮೇಕ್ ಆದ, ಥ್ರೀ ಇಡಿಯೋಟಾಸ್ ೨೦೧೭ರಲ್ಲಿ ಬಿಡುಗಡೆಗೊಂಡಿತು. == ಕಥಾವಸ್ತು == ಫ಼ರ್ಹಾನ್ ಕುರೇಶಿ ಮತ್ತು ರಾಜು ರಸ್ತೋಗಿ ತಮ್ಮ ಕಾಲೇಜಿನ ವರ್ಷವನ್ನು ದೆಹಲಿಯ ಪ್ರತಿಷ್ಠಿತ ಇಂಪೀರಿಯಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರಂಭಿಸುತ್ತಾರೆ. ಅವರ ಕೋಣೆಯ ಜೊತೆಗಾರನಾಗಿ ರ‍್ಯಾಂಚೊ ಎಂಬ ಅಡ್ಡಹೆಸರಿನ ರಣ್‍ಛೋಡ್‍ದಾಸ್ ಛಾಂಛಡ್ ಸೇರಿಕೊಳ್ಳುತ್ತಾನೆ. ಫ಼ರ್ಹಾನ್ ತನ್ನ ತಂದೆಯನ್ನು ಸಮಾಧಾನಗೊಳಿಸಲು ಛಾಯಾಗ್ರಹಣದ ಬಗ್ಗೆ ಇರುವ ತನ್ನ ಒಲವಿನ ಬದಲಾಗಿ ಇಂಜಿನಿಯರಿಂಗ್ ಓದಲು ಆಯ್ಕೆಮಾಡಿಕೊಂಡಿದ್ದರೆ, ರಾಜು ತನ್ನ ಕುಟುಂಬದ ಬಡತನವನ್ನು ಅಂತ್ಯಗೊಳಿಸುವ ಪ್ರಯತ್ನವಾಗಿ ಆ ಪಠ್ಯಕ್ರಮವನ್ನು ತೆಗೆದುಕೊಂಡಿರುತ್ತಾನೆ. ಇನ್ನೊಂದೆಡೆ, ರ‍್ಯಾಂಚೊ ವಿಜ್ಞಾನ ಮತ್ತು ಇಂಜಿನಿಯರಿಂಗ್ ಬಗ್ಗೆ ನಿಜವಾಗಿಯೂ ಪ್ರೀತಿ ಹೊಂದಿರುತ್ತಾನೆ. ಅವನು ಸಕ್ರಿಯ ಭಾಗವಹಿಕೆಯಿರುವ ಕಲಿಕೆಯನ್ನು ನಂಬಿರುತ್ತಾನೆ ಮತ್ತು ತರಗತಿಯಲ್ಲಿ ಅಸಾಂಪ್ರದಾಯಿಕ ಉತ್ತರಗಳನ್ನು ಹೇಳುವ ಪ್ರವೃತ್ತಿ ಹೊಂದಿರುತ್ತಾನೆ. ಪರಿಣಾಮವಾಗಿ ಅವನು ಪ್ರಾಧ್ಯಾಪಕರೊಂದಿಗೆ ಅಸಮ್ಮತಿಯನ್ನು ಹೊಂದಿರುತ್ತಾನೆ, ವಿಶೇಷವಾಗಿ ಸಂಸ್ಥೆಯ ನಿರ್ದೇಶಕ ವೀರು ಸಹಸ್ತ್ರಬುದ್ಧೆಯೊಂದಿಗೆ. ಇವರಿಗೆ ಐಸಿಇಯ ಸಮುದಾಯವು "ವೈರಸ್" ಎಂದು ಅಡ್ಡಹೆಸರು ಇಟ್ಟಿರುತ್ತದೆ. ಶಿಕ್ಷಣದ ಬಗ್ಗೆ ವೈರಸ್‍ನ ಸಾಂಪ್ರದಾಯಿಕ ಮತ್ತು ಕಟ್ಟುನಿಟ್ಟಿನ ಜೀವನಕ್ರಮಗಳು ಕಲಿಕೆ ಬಗ್ಗೆ ರ‍್ಯಾಂಚೊನ ನಿಶ್ಚಿಂತೆಯ ಪ್ರೀತಿಯಿಂದ ತೀವ್ರವಾಗಿ ಭಿನ್ನವಾಗಿರುತ್ತವೆ. ಈ ನಡುವೆ, "ಸೈಲೆನ್ಸರ್" ಎಂಬ ಅಡ್ಡಹೆಸರಿನ ಚತುರ್ ಹಿಂದಿಯ ಸ್ವಲ್ಪ ಜ್ಞಾನವಿರುವ ಜಂಬದ ವಿದ್ಯಾರ್ಥಿಯಾಗಿರುತ್ತಾನೆ. ಇವನು ಪರೀಕ್ಷೆಗಳಲ್ಲಿ ಅತ್ಯುನ್ನತ ಸ್ಥಾನ ಗಳಿಸುವ ಗೀಳು ಹೊಂದಿರುತ್ತಾನೆ ಮತ್ತು ಯಾವಾಗಲೂ ಉರು ಹೊಡೆದು ಕಲಿಯುತ್ತಿರುತ್ತಾನೆ. ಸ್ವಲ್ಪ ದಿನಗಳ ನಂತರ, ಆ ಮೂವರು ಯಂತ್ರಗಳಲ್ಲಿ ರ‍್ಯಾಂಚೊನಷ್ಟೇ ಆಸಕ್ತಿ ಹೊಂದಿದ್ದ ಜಾಯ್ ಲೋಬೊ ಎಂಬ ಹೆಸರಿನ ವಿದ್ಯಾರ್ಥಿಯು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಾಣುತ್ತಾರೆ. ಇದು ಒಂದು ನಿಯಮಿತ ಕಾರ್ಯವನ್ನು ಸಲ್ಲಿಸುವುದರಲ್ಲಾದ ವಿಳಂಬದ ಕಾರಣ ಜಾಯ್ ಆ ವರ್ಷ ಪದವೀಧರನಾಗುವುದು ಸಾಧ್ಯವಿಲ್ಲ ಎಂದು ವೈರಸ್ ಜಾಯ್‍ನ ತಂದೆಗೆ ತಿಳಿಸಿದ ನಂತರ ಉಂಟಾದ ಖಿನ್ನತೆಯ ಕಾರಣದಿಂದಾಗಿರುತ್ತದೆ. ಜಾಯ್ ಕ್ವಾಡ್‍ಕಾಪ್ಟರ್‌ನ ತನ್ನ ಮಹತ್ತರ ಡ್ರೋನ್‍ನ ವಿನ್ಯಾಸವನ್ನು ಪೂರ್ಣಗೊಳಿಸಲು ಬಯಸಿದ್ದರಿಂದ, ಜೊತೆಗೆ ತನ್ನ ತಂದೆಯ ಅಲ್ಪಾವಧಿಯ ಕಾಯಿಲೆಯ ಕಾರಣ ತೆಗೆದುಕೊಂಡ ಬಿಡುವಿನ ಕಾರಣದಿಂದ ಹೆಚ್ಚು ಸಮಯ ತೆಗೆದುಕೊಂಡಿರುತ್ತಾನೆ. ರ‍್ಯಾಂಚೊ ವೈರಸ್‍ನ ಕಲಿಸುವ ವಿಧಾನವನ್ನು ಟೀಕಿಸಿ ಅವನಿಗೆ ಇಂಜಿನಿಯರುಗಳು ಓದುವಾಗ ಎಷ್ಟು ಒತ್ತಡವನ್ನು ಎದುರಿಸುತ್ತಾರೆ ಎಂದು ತೋರಿಸಲು ಪ್ರಯತ್ನಿಸುತ್ತಾನೆ. ಇದು ವೈರಸ್‍ನನ್ನು ಮತ್ತಷ್ಟು ಸಿಟ್ಟಾಗಿಸುತ್ತದೆ. ರ‍್ಯಾಂಚೊ ತನ್ನ ಗೆಳೆಯರ ಕುಟುಂಬಗಳಿಗೆ ಭೇಟಿ ನೀಡುತ್ತಾನೆ, ಮತ್ತು ನಂತರ, ಆ ಮೂವರು ಒಳ್ಳೆ ಆಹಾರ ತಿನ್ನುವ ಆಸೆಯಿಂದ ಆಹ್ವಾನವಿಲ್ಲದೆ ಒಂದು ಮದುವೆ ಸಮಾರಂಭಕ್ಕೆ ನುಗ್ಗುತ್ತಾರೆ. ಅವರು ಪಿಯಾಳನ್ನು ಭೇಟಿಯಾಗಿ ಅವಳ ಸ್ನೇಹಬೆಳೆಸುತ್ತಾರೆ. ಪಿಯಾ ವೈರಸ್‍ನ ಮಗಳಾಗಿದ್ದು ನಗರದ ಆಸ್ಪತ್ರೆಯಲ್ಲಿ ನಿವಾಸಿ ವಿದ್ಯಾರ್ಥಿನಿಯಾಗಿರುತ್ತಾಳೆ. ಅವನು ದುಬಾರಿ ಆಭರಣಗಳು, ಬ್ರ್ಯಾಂಡ್‍ಗಳು ಮತ್ತು ಬೆಲೆಗಳ ಬಗ್ಗೆ ಹುಚ್ಚನಂತೆ ಗೀಳು ಹೊಂದಿರುವುದರಿಂದ ಅವಳ ನಿಶ್ಚಿತ ವರ ಸುಹಾಸ್‍ನನ್ನು ಮದುವೆಯಾಗಬಾರದೆಂದು ರ‍್ಯಾಂಚೊ ಪಿಯಾಳಿಗೆ ಸಲಹೆ ನೀಡುತ್ತಾನೆ. ಅವನಿಗೆ ಸಿಟ್ಟುಬರಿಸಲು ಅವನ ಶೂಗಳ ಮೇಲೆ ಪುದೀನಾ ಚಟ್ನಿಯನ್ನು ಚೆಲ್ಲುವ ಮೂಲಕ ರ‍್ಯಾಂಚೊ ಸುಹಾಸ್‍ನ ಮನೋಭಾವದ ಬಗ್ಗೆ ಪಿಯಾಳಿಗೆ ಪ್ರಾತ್ಯಕ್ಷಿಕೆ ನೀಡುತ್ತಾನೆ. ವೈರಸ್ ಆ ಮೂವರನ್ನು ಕಂಡಾಗ, ಮುಂದಿನ ಕೆಲಸದ ದಿನದಂದು ಫ಼ರ್ಹಾನ್ ಮತ್ತು ರಾಜುರನ್ನು ಕರೆಯಿಸಿಕೊಂಡು ಅವರ ಕುಟುಂಬಗಳ ಆದಾಯಗಳನ್ನು ಹೋಲಿಸುವ ಮೂಲಕ ರ‍್ಯಾಂಚೊನೊಂದಿಗೆ ಗೆಳೆಯರಾಗುವುದರ ಪರಿಣಾಮಗಳನ್ನು ಅವರಿಗೆ ಹೇಳುತ್ತಾನೆ. ರ‍್ಯಾಂಚೊ ಬಹಳ ಶ್ರೀಮಂತ ಕುಟುಂಬದಿಂದ ಬಂದಿದ್ದಾನೆ ಮತ್ತು ಅವನು ಉತ್ತಮ ಶ್ರೇಣಿಗಳನ್ನು ಪಡೆಯುವ ಮತ್ತು ವೃತ್ತಿಯನ್ನು ಕಟ್ಟಿಕೊಳ್ಳುವ ಚಿಂತೆ ಮಾಡಬೇಕಾಗಿಲ್ಲ ಎಂದು ಅವನು ಅವರಿಗೆ ಹೇಳುತ್ತಾನೆ. ಪರಿಣಾಮ ಹೊಂದಿ, ರಾಜು ಅಲ್ಲಿಂದ ಹೊರನಡೆದು ಚತುರ್‌ನ ಕೋಣೆಗೆ ಸ್ಥಳಾಂತರವಾಗುತ್ತಾನೆ. ಶಿಕ್ಷಕರ ದಿನಾಚರಣೆಯ ವೇಳೆ, ರ‍್ಯಾಂಚೊ ಮಾರ್ಪಡಿಸಿದ ಹಿಂದಿ ಭಾಷಣವನ್ನು ಮಾಡಿದಾಗ ಚತುರ್ ಅವಮಾನಗೊಳ್ಳುತ್ತಾನೆ. ಪರಿಣಾಮವಾಗಿ, ಹತ್ತು ವರ್ಷಗಳ ನಂತರ, ಯಾರು ಹೆಚ್ಚು ಯಶಸ್ವಿಯಾಗಿರುತ್ತಾರೆ ಎಂದು ಅವರು ನೋಡುವರು ಎಂದು ಅವನು ಪಂಥ ಒಡ್ಡುತ್ತಾನೆ. ಸ್ವಲ್ಪ ಸಮಯದ ನಂತರ, ಪಿಯಾ ಸುಹಾಸ್‍ನೊಂದಿಗೆ ಮಾಲ್‍ನಲ್ಲಿದ್ದಾಗ ವೈರಸ್‍ನಿಂದ ಹೆಸರು ಪಡೆದ ವೈರಸ್ ವಿಪರ್ಯಯಕ ಎಂಬ ಆವಿಷ್ಕಾರದೊಂದಿಗೆ ರ‍್ಯಾಂಚೊನನ್ನು ಕಾಣುತ್ತಾಳೆ. ಅವಳ ತಂದೆ ವಿದ್ಯಾರ್ಥಿಗಳಿಗೆ ಕಲಿಸುವ ರೀತಿಯನ್ನು ತಾನು ಇಷ್ಟಪಡುವುದಿಲ್ಲ ಮತ್ತು ಅವರು ಕೊನೆಯಲ್ಲಿ ಸುಹಾಸ್‍ನಂತೆ ಪೆದ್ದರಾಗುತ್ತಾರೆ ಎಂದು ರ‍್ಯಾಂಚೊ ಪಿಯಾಳಿಗೆ ವಿವರಿಸುತ್ತಾನೆ. ಸುಹಾಸ್ ಅವಳ ಬದಲು ದುಬಾರಿ ವಸ್ತುಗಳಿಗೆ ಹೆಚ್ಚು ಮೌಲ್ಯ ತೋರಿಸುತ್ತಾನೆ ಎಂದು ಸಾಬೀತುಮಾಡಲು ರ‍್ಯಾಂಚೊ ಸುಹಾಸ್‍ನ ಮೇಲೆ ಪಿಯಾ ತನ್ನ ಕೈಗಡಿಯಾರವನ್ನು ಕಳೆದುಕೊಂಡಿದ್ದಾಳೆ ಎಂದು ನಟಿಸುವ ಒಂದು ಕುಚೇಷ್ಟೆ ಮಾಡುತ್ತಾನೆ. ಸುಹಾಸ್‍ನ ವರ್ತನೆಯಿಂದ ಬೇಸರಗೊಂಡು, ಅವಳು ಅವನಿಗೆ ಬಯ್ಯುತ್ತಾಳೆ. ರ‍್ಯಾಂಚೊ ಮತ್ತು ಪಿಯಾ ರಾಜುನ ಸಾಯುತ್ತಿರುವ ಅಪ್ಪನನ್ನು ಉಳಿಸುತ್ತಾರೆ; ರಾಜು ತನ್ನ ಗೆಳೆಯರೊಂದಿಗೆ ರಾಜಿ ಮಾಡಿಕೊಳ್ಳುತ್ತಾನೆ ಮತ್ತು ಪಿಯಾ ರ‍್ಯಾಂಚೊನನ್ನು ಪ್ರೀತಿಸತೊಡಗುತ್ತಾನೆ. ಅವರ ಕೊನೆಯ ವರ್ಷದ ಒಂದು ರಾತ್ರಿ, ಫ಼ರ್ಹಾನ್ ಮತ್ತು ರಾಜು ತಾವು ಪ್ರತಿ ವರ್ಷ ತಮ್ಮ ಶ್ರೇಣಿಗಳ ವಿಚಾರದಲ್ಲಿ ತಾವು ಹಿಂದೆಬಿದ್ದಿರುವುದಕ್ಕಾಗಿ ಮತ್ತು ರ‍್ಯಾಂಚೊ ಪ್ರತಿಯೊಂದು ಶಾಲಾ ಚಿತ್ರದ ಮುಂಭಾಗದಲ್ಲಿ ಯಾವಾಗಲೂ ಇರುತ್ತಾನೆ ಎಂದು ಅಸಂತೋಷಗೊಂಡಿರುತ್ತಾರೆ. ಫ಼ರ್ಹಾನ್ ರ‍್ಯಾಂಚೊ ಪಿಯಾಳಿಗೆ ತಾನು ಅವಳನ್ನು ಪ್ರೀತಿಸುತ್ತಿದ್ದಾನೆ ಎಂದು ಹೇಳಿಲ್ಲ ಮತ್ತು ಕಳೆದ ನಾಲ್ಕು ವರ್ಷಗಳಿಂದ ಅವಳಿಗೆ ಹೇಳಿಲ್ಲ ಎಂಬ ಗುಟ್ಟು ರಟ್ಟುಮಾಡುತ್ತಾನೆ. ರ‍್ಯಾಂಚೊ ಪಿಯಾಗೆ ಮದುವೆ ಪ್ರಸ್ತಾಪ ಮಾಡುವಂತೆ ಆಗಲು ಮೂವರೂ ಸ್ನೇಹಿತರು ಕುಡಿದು ಸಹಸ್ತ್ರಬುದ್ಧೆ ನಿವಾಸದೊಳಗೆ ಪ್ರವೇಶಿಸುತ್ತಾರೆ. ಮೂವರೂ ತಪ್ಪಿಸಿಕೊಳ್ಳುತ್ತಿರುವಾಗ, ವೈರಸ್ ರಾಜುನನ್ನು ಗುರುತಿಸುತ್ತಾನೆ ಮತ್ತು, ಮರುದಿನ, ಅವನು ಉಚ್ಚಾಟನೆಗಾಗಿ ರ‍್ಯಾಂಚೊನನ್ನು ಶಿಫಾರಸು ಮಾಡದಿದ್ದರೆ ಅವನನ್ನು ಹೊರಹಾಕುವುದಾಗಿ ಬೆದರಿಕೆ ಹಾಕುತ್ತಾನೆ. ರ‍್ಯಾಂಚೊಗೆ ದ್ರೋಹಮಾಡಲು ಅಥವಾ ತನ್ನ ಕುಟುಂಬಕ್ಕೆ ನಿರಾಶೆಮಾಡಲು ಇಷ್ಟವಿರದೇ, ರಾಜು ಆತ್ಮಹತ್ಯೆ ಮಾಡಿಕೊಳ್ಳಲು ವಿಫಲವಾಗಿ ಪ್ರಯತ್ನಿಸುತ್ತಾನೆ ಮತ್ತು ಕೋಮಕ್ಕೆ ಹೋಗುತ್ತಾನೆ. ತುರ್ತು ನಿಗಾ ಮತ್ತು ತನ್ನ ಸ್ನೇಹಿತರ ಬೆಂಬಲದೊಂದಿಗೆ, ರಾಜು ಕ್ಯಾಂಪಸ್‍ನಲ್ಲಿನ ಮೊದಲ ಉದ್ಯೋಗ ಸಂದರ್ಶನಕ್ಕೆ ಸರಿಯಾದ ಸಮಯದೊಳಗೆ ಚೇತರಿಸಿಕೊಳ್ಳುತ್ತಾನೆ, ಮತ್ತು ಅದನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಆ ನಡುವೆ, ರ‍್ಯಾಂಚೊ ಮತ್ತು ಪಿಯಾ ಫ಼ರ್ಹಾನ್‍ನ ಪತ್ರವನ್ನು ಅವನ ಅಚ್ಚುಮೆಚ್ಚಿನ ಛಾಯಾಗ್ರಾಹಕ ಆಂಡ್ರೆ ಇಸ್ಟ್‌ವಾನ್‍ಗೆ ಅಂಚೆಯಲ್ಲಿ ಕಳಿಸುತ್ತಾರೆ, ಮತ್ತು ಅವರು ಅವನಿಗೆ ಸಹಾಯಕನ ಸ್ಥಾನವನ್ನು ನೀಡುತ್ತಾರೆ. ರ‍್ಯಾಂಚೊನ ಸಲಹೆ ಮೇರೆಗೆ, ಅವನು ತನ್ನ ಕನಸನ್ನು ತನ್ನ ತಂದೆಗೆ ತಿಳಿಸುತ್ತಾನೆ, ಮತ್ತು ಅವನ ತಂದೆಗೆ ಮೊದಲು ಮನಸ್ಸಿಲ್ಲದಿದ್ದರೂ, ತಮ್ಮ ಮಗನ ಸಂತೋಷಕ್ಕಾಗಿ ತಮ್ಮ ಆಶೀರ್ವಾದಗಳನ್ನು ನೀಡುತ್ತಾರೆ. ಇದರಿಂದ ಮತ್ತು ರ‍್ಯಾಂಚೊನ ಪ್ರಭಾವದಿಂದ ಸಿಟ್ಟಾಗಿ, ರಾಜುನನ್ನು ಅನುತ್ತೀರ್ಣಗೊಳಿಸಲು ವೈರಸ್ ಕಷ್ಟದ ಕೊನೆ ಪರೀಕ್ಷೆಯ ಪ್ರಶ್ನಪತ್ರಿಕೆಯನ್ನು ಸಿದ್ಧಪಡಿಸುತ್ತಾನೆ. ಇದು ಗೊತ್ತಾಗಿ, ಪಿಯಾ ಆ ಮೂವರಿಗೆ ನೆರವಾಗಲು ಪ್ರಯತ್ನಿಸಿ ಅವರಿಗೆ ತನ್ನ ತಂದೆಯ ಕಚೇರಿಯಲ್ಲಿ ಪರೀಕ್ಷೆಯ ಪ್ರಶ್ನಪತ್ರಿಕೆಯ ಸ್ಥಳವನ್ನು ಬಹಿರಂಗಪಡಿಸುತ್ತಾಳೆ; ದುರದೃಷ್ಟವಶಾತ್, ವೈರಸ್‍ಗೆ ಗೊತ್ತಾಗಿ ಅವರನ್ನು ಉಚ್ಚಾಟಿಸುತ್ತಾನೆ. ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ವೈರಸ್‍ನ ನಿರೀಕ್ಷೆಯನ್ನು ತೃಪ್ತಿಪಡಿಸಲು ಆಗದೇ ಆತ್ಮಹತ್ಯೆ ಮಾಡಿಕೊಂಡಿದ್ದ ತನ್ನ ಸಹೋದರನ ಬಗ್ಗೆ ಪಿಯಾ ತನ್ನ ತಂದೆಯ ಎದುರುಬೀಳುತ್ತಾಳೆ. ಅದೇ ದಿನ ರಾತ್ರಿ, ವೈರಸ್‍ನ ಗರ್ಭಿಣಿ ಹಿರಿಮಗಳು ಮೋನಾಗೆ ಹೆರಿಗೆ ನೋವು ಶುರುವಾಗುತ್ತದೆ. ಆ ದಿನ ಜೋರಾದ ಗಾಳಿಯಿಂದ ನಗರದಲ್ಲಿನ ಎಲ್ಲ ಸಂಚಾರ ಮತ್ತು ವಿದ್ಯುತ್ತು ನಿಂತು ಹೋಗಿರುತ್ತದೆ. ರ‍್ಯಾಂಚೊ ಮತ್ತು ಇತರ ವಿದ್ಯಾರ್ಥಿಗಳು ತಮ್ಮ ಇಂಜಿನಿಯರಿಂಗ್ ಜ್ಞಾನವನ್ನು ಬಳಸಿ ಕ್ಷಿಪ್ರವಾಗಿ ನಿರ್ವಾತ ಮಾರ್ಜಕವನ್ನು ವೆಂಟೋಸ್ ಆಗಿ ಮಾರ್ಪಡಿಸಿ ಒಂದು ವೀಡಿಯೊ ಕರೆಯಲ್ಲಿ ಪಿಯಾಳ ನೆರವಿನಿಂದ ಶಿಶುವಿನ ಹೆರಿಗೆ ಮಾಡಿಸಿ ಅವರಿಗೆ ನೆರವಾಗುತ್ತಾರೆ. ಕೃತಜ್ಞನಾದ ವೈರಸ್ ಅಂತಿಮವಾಗಿ ರ‍್ಯಾಂಚೊನನ್ನು ಅಸಾಮಾನ್ಯ ವಿದ್ಯಾರ್ಥಿ ಎಂದು ಒಪ್ಪಿಕೊಂಡು ಅವರ ಉಚ್ಚಾಟನೆಯನ್ನು ರದ್ದುಮಾಡುತ್ತಾನೆ. ಪದವಿಪ್ರದಾನ ದಿನದಂದು, ಸಮಾರಂಭ ಕೊನೆಗೊಂಡ ಸ್ವಲ್ಪವೇ ಸಮಯದ ನಂತರ ರ‍್ಯಾಂಚೊ ದಿಢೀರನೇ ಕಣ್ಮರೆಯಾಗುತ್ತಾನೆ. ಹತ್ತು ವರ್ಷಗಳ ನಂತರ, ಫ಼ರ್ಹಾನ್ ಯಶಸ್ವಿ ವನ್ಯಜೀವಿ ಛಾಯಾಗ್ರಾಹಕನಾಗಿರುತ್ತಾನೆ, ಮತ್ತು ರಾಜು ಮದುವೆಯಾಗಿ ಕಾರ್ಪೊರೇಟ್ ಕೆಲಸದಲ್ಲಿ ಇದ್ದು ತನ್ನ ಕುಟುಂಬದೊಂದಿಗೆ ಸುಖಕರ ಜೀವನಶೈಲಿಯಲ್ಲಿ ನೆಲೆಸಿರುತ್ತಾನೆ, ಮತ್ತು ಚತುರ್ ಅಮೇರಿಕದಲ್ಲಿನ ಒಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಉಪಾಧ್ಯಕ್ಷನಾಗಿರುತ್ತಾನೆ; ಈ ಮೂವರಲ್ಲಿ ಯಾರೂ ಪದವಿಯ ನಂತರ ರ‍್ಯಾಂಚೊನ ಬಗ್ಗೆ ಕೇಳಿರುವುದಿಲ್ಲ. ಐಸಿಇ ಆವರಣದಲ್ಲಿ ಮತ್ತೆ ಒಂದಾಗಿ ಅವರು ಶಿಮ್ಲಾಕ್ಕೆ ಪ್ರಯಾಣಿಸುತ್ತಾರೆ ಏಕೆಂದರೆ ಅಲ್ಲಿ ಒಂದು ಭಾವಚಿತ್ರದ ಹಿನ್ನೆಲೆಯಲ್ಲಿ ರ‍್ಯಾಂಚೊ ಕಾಣಿಸಿಕೊಂಡಿರುತ್ತಾನೆ. ಅಲ್ಲಿಗೆ ಆಗಮಿಸಿದ ಮೇಲೆ, ಅವರು ನಿಜವಾದ ರಣ್‍ಛೋಡ್‍ದಾಸ್ ಚಾಂಚಡ್ (ಜಾವೇದ್ ಜಾಫ಼್ರಿ) ಆಗಿರುವ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ತಮಗೆ ಪರಿಚಿತವಿದ್ದ ರ‍್ಯಾಂಚೊ ವಾಸ್ತವದಲ್ಲಿ ಚಾಂಚಡ್ ಕುಟುಂಬದಲ್ಲಿ ಸೇವಕನಾಗಿದ್ದ ಮಾಲಿಯ ಮಗ "ಛೋಟೆ" ಆಗಿದ್ದಾನೆ ಎಂದು ಅವನಿಂದ ಅವರು ತಿಳಿದುಕೊಳ್ಳುತ್ತಾರೆ. ರಣ್‍ಛೋಡ್‍ದಾಸ್‍ನ ತಂದೆಯು ಛೋಟೆ ಐಸಿಇಗೆ ತನ್ನ ಮಗನ ಹೆಸರಿನಲ್ಲಿ ಹೋಗುವಂತೆ ಏರ್ಪಾಟು ಮಾಡಿರುತ್ತಾನೆ ಮತ್ತು ಅವನ ಮಗನು ಆ ಪದವಿಗೆ ಮನ್ನಣೆ ಪಡೆಯುವುದು ಉದ್ದೇಶವಾಗಿರುತ್ತದೆ. ರಣ್‍ಛೋಡ್‍ದಾಸ್ ಲಡಾಖ್‍ನಲ್ಲಿ ಶಾಲಾ ಶಿಕ್ಷಕನಾಗಿರುವ ಛೋಟೆಯ ವಿಳಾಸವನ್ನು ನೀಡುತ್ತಾನೆ. ದಾರಿಯಲ್ಲಿ, ಅವರು ಮನಾಲಿ ಮೂಲಕ ಸಾಗಿ ಸುಹಾಸ್‍ನನ್ನು ಪಿಯಾ ಮದುವೆಯಾಗದಂತೆ ತಡೆದು ಅವಳನ್ನು ಪಾರುಮಾಡುತ್ತಾರೆ. ಸುಹಾಸ್ ಈಗ ಬದಲಾದ ಮನುಷ್ಯನಾಗಿದ್ದರೂ, ಮನೆವಾರ್ತೆ ವ್ಯಕ್ತಿಯ ವೇಷ ಹಾಕಿಕೊಂಡು ರಾಜು ಅವನ ಮದುವೆಯ ಶೇರವಾನಿ ಮೇಲೆ ಪುದೀನ ಚಟ್ನಿಯನ್ನು ಹಾಕಿದಾಗ ತನ್ನ ಹಳೆ ಚಾಳಿಗಳಿಗೆ ಮರಳುತ್ತಾನೆ. ಇದರಿಂದ ರಾಜು ಅವನ ಉಡುಗೆಯಲ್ಲಿ ಮದುವೆ ಸಮಾರಂಭದಿಂದ ಪರಾರಿಯಾಗುತ್ತಾನೆ. ಆ ನಡುವೆ, ತನ್ನ ಹೆಸರಲ್ಲಿ ೪೦೦ ಪೇಟೆಂಟ್‍ಗಳನ್ನು ಹೊಂದಿರುವ ವಿಶ್ವವಿಖ್ಯಾತ ವಿಜ್ಞಾನಿ ಮತ್ತು ಉದ್ಯಮಿ ಫುನ್ಸುಖ್ ವಾಂಗ್ಡುನೊಂದಿಗೆ ಚತುರ್ ವ್ಯವಹಾರ ಒಪ್ಪಂದವನ್ನು ಮಾಡಿಕೊಳ್ಳುವ ಆತುರದಲ್ಲಿರುತ್ತಾನೆ. ಲಡಾಖ್‍ಗೆ ಆಗಮಿಸಿದ ಮೇಲೆ, ಆ ನಾಲ್ವರೂ ಹಳ್ಳಿಯ ಶಾಲೆಗೆ ಹೋಗಿ ರ‍್ಯಾಂಚೊ‍ನ ಕಾಲೇಜು ಪ್ರಾಜೆಕ್ಟ್‌ಗಳನ್ನು ಹೋಲುವ ಯುವ ವಿದ್ಯಾರ್ಥಿಗಳ ಆವಿಷ್ಕಾರಗಳನ್ನು ಕಣ್ಣಾರೆ ನೋಡುತ್ತಾರೆ. ಆ ನಾಲ್ವರು ರ‍್ಯಾಂಚೊ‍ನೊಂದಿಗೆ ಮತ್ತೆ ಸೇರುತ್ತಾರೆ. ಪಿಯಾ ಮತ್ತು ರ‍್ಯಾಂಚೊ‍ ಒಬ್ಬರನ್ನೊಬ್ಬರು ಚುಂಬಿಸುತ್ತಾರೆ. ಚತುರ್ ಅವಮಾನ ಮಾಡಿ ಅವನು ಅತ್ಯಂತ ಕಡಿಮೆ ಯಶಸ್ವಿಯಾದ ವ್ಯಕ್ತಿ ಎಂದು ಹೇಳುವ ಒಪ್ಪಂದಕ್ಕೆ ಸಹಿಹಾಕುವಂತೆ ರ‍್ಯಾಂಚೊ‍ನನ್ನು ಕೇಳಿಕೊಳ್ಳುತ್ತಾನೆ; ರ‍್ಯಾಂಚೊ‍ ಏನೂ ಮಾತಾಡದೇ ಹಾಗೆ ಮಾಡುತ್ತಾನೆ. ಚತುರ್ ವಿಜಯಶಾಲಿಯಾಗಿ ನಡೆದು ಹೋಗುತ್ತಿರುವಾಗ, ರ‍್ಯಾಂಚೊ‍ ತಾನೇ ಫುನ್ಸುಕ್ ವಾಂಗ್ಡು ಎಂದು ಬಹಿರಂಗಗೊಳಿಸುತ್ತಾನೆ. ಇದರಿಂದ ಅವನ ಗೆಳೆಯರು ಮತ್ತು ಪಿಯಾ ಆಶ್ಚರ್ಯಹೊಂದಿ ಸಂತೋಷಗೊಳ್ಳುತ್ತಾರೆ. ಇದನ್ನು ಅರಿತು, ದಿಗಿಲುಗೊಂಡ ಚತುರ್ ತನ್ನ ಸೋಲನ್ನು ಒಪ್ಪಿಕೊಂಡು ತನ್ನ ಒಪ್ಪಂದಕ್ಕೆ ಸಹಿಹಾಕುವಂತೆ ರ‍್ಯಾಂಚೊ‍ನನ್ನು ಬೇಡಿಕೊಳ್ಳುತ್ತಿರುವಾಗ, ರ‍್ಯಾಂಚೊ‍ ಮತ್ತು ಅವನ ಗೆಳೆಯರು ನಗುತ್ತಾ ಅಲ್ಲಿಂದ ಓಡುತ್ತಾರೆ. ಕೊನೆಯಲ್ಲಿ, ಫುನ್ಸುಕ್ ವಾಂಗ್ಡು ಎಲ್ಲರಿಗೆ ತನ್ನ ಸಿದ್ಧಾಂತವನ್ನು ಹೇಳುತ್ತಾನೆ: "ಶ್ರೇಷ್ಠತೆಯನ್ನು ಅನುಸರಿಸಿದರೆ ಯಶಸ್ಸು ತಾನಾಗಿಯೇ ನಿನ್ನನ್ನು ಅನುಸರಿಸುವುದು". == ನಿರ್ಮಾಣ == ಪ್ರಧಾನ ಛಾಯಾಗ್ರಹಣವು ೨೮ ಜುಲೈ ೨೦೦೮ರಂದು ಶುರುವಾಯಿತು. ಈ ಚಲನಚಿತ್ರವನ್ನು ದೆಹಲಿ, ಬೆಂಗಳೂರು, ಮುಂಬಯಿ, ಲಡಾಖ್, ಚೆಯ್ಲ್ ಮತ್ತು ಶಿಮ್ಲಾದಲ್ಲಿ ಚಿತ್ರೀಕರಿಸಲಾಯಿತು. ಆಮಿರ್ ಮತ್ತು ಪಾತ್ರವರ್ಗದ ಇತರರು ಸೆಪ್ಟೆಂಬರ್‌ನ ಮುಂಚಿನಲ್ಲಿ ಚಿತ್ರೀಕರಣವನ್ನು ಆರಂಭಿಸಿದರು. ಮುಂಬಯಿಯಿಂದ, ತಂಡ ಮತ್ತು ಆಮಿರ್ ಹಾಗೂ ಕರೀನಾ ಸೇರಿದಂತೆ ನಟರು ೨೦ ದಿನದ ಯೋಜನೆಗಾಗಿ ಲಡಾಖ್‍ಗೆ ಹೋದರು. ಐಸಿಇ ಕಾಲೇಜ್‍ನ ದೃಶ್ಯಗಳ ಚಿತ್ರೀಕರಣವು ೩೩ ದಿನಗಳವರೆಗೆ ಐಐಎಂ ಬೆಂಗಳೂರಿನ ಆವರಣದಲ್ಲಿ ನಡೆಯಿತು. ಮಲಗುವ ಕೋಣೆಯ ದೃಶ್ಯಗಳನ್ನು ಆ ಸಂಸ್ಥೆಯ ಮಹಿಳಾ ಶಯನಾಗಾರ ಕಟ್ಟಡದಲ್ಲಿ ಚಿತ್ರೀಕರಿಸಲಾಯಿತು. ಈ ಆವಿಷ್ಕಾರಗಳ ಹಿಂದಿನ ಬುದ್ಧಿಶಕ್ತಿಗಳಲ್ಲಿ ಮೆಟ್ಟುಸನ್ನೆ ನಿರ್ವಹಿತ ಒಗೆಯುವ ಯಂತ್ರವನ್ನು ಸೃಷ್ಟಿಸಿದ ಕೇರಳದ ವಿದ್ಯಾರ್ಥಿನಿಯಾದ ರೆಮ್ಯಾ ಜೋಸ್; ಸೈಕಲ್ ಚಾಲಿತ ಕುದುರೆಯ ಕೂದಲು ಕತ್ತರಿಸುವ ಸಾಧನವನ್ನು ಆವಿಷ್ಕರಿಸಿದ ಉತ್ತರ್ ಪ್ರದೇಶದ ಹಸನ್‍ಪುರ್ ಕಲಾನ್‍ನ ಕ್ಷೌರಿಕ ಮೊಹಮ್ಮದ್ ಇದ್ರಿಸ್; ಮತ್ತು ಸ್ಕೂಟರ್ ಚಾಲಿತ ಹಿಟ್ಟಿನ ಗಿರಣಿಯನ್ನು ತಯಾರಿಸಿದ ಮಹಾರಾಷ್ಟ್ರದ ಬಣ್ಣಗಾರನಾಗಿದ್ದ ಜಹಾಂಗೀರ್ ಪೇಂಟರ್ ಸೇರಿದ್ದರು. ಫ಼ುನ್ಸುಕ್ ವಾಂಗ್ಡು ಪಾತ್ರವು ಲಡಾಖಿ ಆವಿಷ್ಕಾರಕ ಸೋನಮ್ ವಾಂಗ್‍ಚುಕ್‍ನಿಂದಲೂ ಸ್ಫೂರ್ತಿ ಪಡೆದಿರಬಹುದು. == ಧ್ವನಿವಾಹಿನಿ == ಈ ಚಿತ್ರದ ಧ್ವನಿವಾಹಿನಿಯನ್ನು ಶಂತನು ಮೊಯಿತ್ರಾ ಸಂಯೋಜಿಸಿದ್ದಾರೆ. ಸ್ವಾನಂದ್ ಕಿರ್ಕಿರೆ ಗೀತೆಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ. == ಪ್ರಶಸ್ತಿಗಳು == ಈ ಚಲನಚಿತ್ರವು ಭಾರತೀಯ ಚಲನಚಿತ್ರ ಪ್ರಶಸ್ತಿ ಸಮಾರಂಭಗಳಲ್ಲಿ ೫೮ ಪ್ರಶಸ್ತಿಗಳನ್ನು ಗೆದ್ದುಕೊಂಡಿತು; ಇವುಗಳಲ್ಲಿ ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಿರ್ದೇಶಕ ಸೇರಿದಂತೆ ಆರು ಫಿಲ್ಮ್‌ಫೇರ್ ಪ್ರಶಸ್ತಿಗಳು, ಅತ್ಯುತ್ತಮ ಜನಪ್ರಿಯ ಚಲನಚಿತ್ರ ಸೇರಿದಂತೆ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಹತ್ತು ಸ್ಕ್ರೀನ್ ಪ್ರಶಸ್ತಿಗಳು, ಹದಿನೇಳು ಐಫ಼ಾ ಪ್ರಶಸ್ತಿಗಳು, ಐದು ಜೀಮಾ ಪ್ರಶಸ್ತಿಗಳು, ಎರಡು ಅಪ್ಸರಾ ಪ್ರಶಸ್ತಿಗಳು ಸೇರಿದ್ದವು. ವಿದೇಶಗಳಲ್ಲೂ, ಚೀನಾ ಮತ್ತು ಜಪಾನ್ ಸೇರಿದಂತೆ, ಈ ಚಲನಚಿತ್ರವು ಅನೇಕ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತ್ತು. == ವಿವಾದ == ಚಲನಚಿತ್ರದ ಬಿಡುಗಡೆಯ ಕೆಲವು ದಿನಗಳ ನಂತರ ವಿವಾದ ಉಂಟಾಯಿತು. "ಚೇತನ್ ಭಗತ್‍ರ ಫ಼ೈವ್ ಪಾಯಿಂಟ್ ಸಮ್‍ವನ್ ಕಾದಂಬರಿ ಮೇಲೆ ಆಧಾರಿತ" ಎಂಬ ವಂದನೆಯು ಆರಂಭದ ವಂದನೆಗಳ ಬದಲಾಗಿ ಮುಕ್ತಾಯದ ವಂದನೆಗಳಲ್ಲಿ ಕಾಣಿಸಿದ್ದರಿಂದ ಈ ವಿವಾದ ಉಂಟಾಯಿತು. ಚೇತನ್ ಭಗತ್ ಆರಂಭದ ವಂದನೆಯನ್ನು ನಿರೀಕ್ಷಿಸುತ್ತಿದ್ದರು. ಆದರೆ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು ಸ್ಪಷ್ಟೀಕರಣ ನೀಡಿದ ಮೇಲೆ ವಿವಾದ ಬಗೆಹರಿಯಿತು. == ಚಿತ್ರದ ಕೊಡುಗೆ == === ಪ್ರಭಾವ === ಜುಲೈ ೨೦೧೦ರಲ್ಲಿ ಟಿವಿಯಲ್ಲಿ ಮೊದಲ ಬಾರಿ ಪ್ರದರ್ಶನವಾದಾಗ, ಥ್ರೀ ಇಡಿಯಟ್ಸ್ ಭಾರತದಲ್ಲಿ ೩೯ ಮಿಲಿಯನ್ ಪ್ರೇಕ್ಷಕರನ್ನು ಸೆಳೆಯಿತು. ಥ್ರೀ ಇಡಿಯಟ್ಸ್ ಚೈನಾದಲ್ಲಿ ಬಿಡುಗಡೆಯಾದಾಗ, ಆ ದೇಶವು ೧೫ನೇ ಅತಿ ದೊಡ್ಡ ಚಲನಚಿತ್ರ ಮಾರುಕಟ್ಟೆ ಮಾತ್ರ ಆಗಿತ್ತು, ಭಾಗಶಃ ಆ ಕಾಲದಲ್ಲಿ ವ್ಯಾಪಕ ಅಕ್ರಮ ಡಿವಿಡಿ ವಿತರಣೆಯ ಕಾರಣದಿಂದ. ಆದರೆ, ಇದೇ ಅಕ್ರಮ ಮಾರುಕಟ್ಟೆಯಿಂದ ಥ್ರೀ ಇಡಿಯಟ್ಸ್ ಬಹುತೇಕ ಚೈನೀಸ್ ಪ್ರೇಕ್ಷಕರಿಗೆ ಪರಿಚಯವಾಯಿತು ಮತ್ತು ಆ ದೇಶದಲ್ಲಿ ಕಲ್ಟ್ ಹಿಟ್ ಆಯಿತು. ಪರಿಣಾಮವಾಗಿ, ಆಮಿರ್ ಖಾನ್ ದೊಡ್ಡ ಬೆಳೆಯುತ್ತಿರುವ ಚೈನೀಸ್ ಅಭಿಮಾನಿ ಬಳಗವನ್ನು ಗಳಿಸಿಕೊಂಡರು. ೨೦೧೩ರ ವೇಳೆಗೆ, ಚೈನಾ ವಿಶ್ವದ ಎರಡನೇ ಅತಿ ದೊಡ್ಡ ಚಲನಚಿತ್ರ ಮಾರುಕಟ್ಟೆಯಾಗುವಷ್ಟು (ಅಮೇರಿಕದ ನಂತರ) ಬೆಳೆಯಿತು. ಇದು ಆಮಿರ್ ಖಾನ್‍ರ ಚೈನೀಸ್ ಬಾಕ್ಸ್ ಆಫ಼ಿಸ್ ಯಶಸ್ಸಿಗೆ ದಾರಿಮಾಡಿಕೊಟ್ಟಿತು, ಮತ್ತು ಧೂಮ್ ಥ್ರೀ, ಪಿಕೆ, ದಂಗಲ್ ಹಾಗೂ ಸೀಕ್ರೆಟ್ ಸೂಪರ್‌ಸ್ಟಾರ್ ಎಲ್ಲವೂ ಯಶಸ್ಸು ಗಳಿಸಿದವು. ಜನಪ್ರಿಯ ಚೈನೀಸ್ ಚಲನಚಿತ್ರ ವಿಮರ್ಶಾ ತಾಣ ಡೌಬಾನ್‍ದಲ್ಲಿನ ಜನಪ್ರಿಯತೆ ಅಂದಾಜಿನ ಪ್ರಕಾರ, ಥ್ರೀ ಇಡಿಯಟ್ಸ್ ಚೈನಾದ ೧೨ನೇ ಅಚ್ಚುಮೆಚ್ಚಿನ ಚಿತ್ರವೆಂದು ಸ್ಥಾನ ಪಡೆದಿದೆ. ಒಂದೇ ಒಂದು ದೇಶೀಯ ಚೈನೀಸ್ ಚಲನಚಿತ್ರ ಫ಼ೇರ್‌ವೆಲ್ ಮೈ ಕಾನ್‍ಕ್ಯುಬೈನ್ ಇದಕ್ಕಿಂತ ಹೆಚ್ಚಿನ ಸ್ಥಾನವನ್ನು ಪಡೆದಿತ್ತು. ಚೀನಾ ಮತ್ತು ಹಾಂಗ್ ಕಾಂಗ್‍ನಂತಹ ಪೂರ್ವ ಏಷ್ಯಾದ ಮಾರುಕಟ್ಟೆಗಳಲ್ಲಿ ಅದರ ಯಶಸ್ಸಿಗೆ ಒಂದು ಕಾರಣವೆಂದರೆ ಹೋಲುವ ಶಿಕ್ಷಣ ವ್ಯವಸ್ಥೆಗಳು, ಹಾಗಾಗಿ ಅನೇಕ ವಿದ್ಯಾರ್ಥಿಗಳು ಪಾತ್ರಗಳೊಂದಿಗೆ ಗುರುತಿಸಿಕೊಳ್ಳುವುದು ಸಾಧ್ಯವಾಯಿತು. ಈ ಚಿತ್ರದ ಯಶಸ್ಸನ್ನು ಮಿತಿ ಮೀರಿ ಸ್ಪರ್ಧಾತ್ಮಕವಾದ ಶಿಕ್ಷಣ ವ್ಯವಸ್ಥೆಯನ್ನು ವಿಶ್ಲೇಷಿಸಿ ಖಚಿತಪಡಿಸಿಕೊಳ್ಳಬಹುದು ಎಂದು ಚೆಯರಿಮ್ ಓ ಬರೆದರು. ಕೊರಿಯಾದಲ್ಲಿ, ಎಲ್ಲ ವಯಸ್ಸಿನ ವಿದ್ಯಾರ್ಥಿಗಳು ಅಗಾಧ ಒತ್ತಡ ಮತ್ತು ಅತಿಯಾಗಿ ಹೆಚ್ಚಾದ ಶೈಕ್ಷಣಿಕ ಗುಣಮಟ್ಟಗಳಲ್ಲಿ ಓದಲು ತರಬೇತಿ ಪಡೆದಿರುತ್ತಾರೆ. ಸಂಕ್ಷಿಪ್ತವಾಗಿ, ಈ ಚಲನಚಿತ್ರವು ನಿಜವಾಗಿ ನಮ್ಮ ಸ್ವಂತದ ಕಥೆಯಾಗಿದೆ ಎಂದು ಅವರು ಬರೆದರು. ಈ ಚಲನಚಿತ್ರವು ಭಾರತದಲ್ಲಿನ ಶಿಕ್ಷಣ ಜೊತೆಗೆ ಇತರ ಏಷ್ಯನ್ ದೇಶಗಳಲ್ಲಿನ ಶಿಕ್ಷಣ ಸೇರಿದಂತೆ, ಏಷ್ಯಾದಲ್ಲಿ ಶಿಕ್ಷಣದ ಬಗ್ಗೆಯ ಮನೋಭಾವಗಳ ಮೇಲೆ ಸಾಮಾಜಿಕ ಪ್ರಭಾವವನ್ನು ಬೀರಿತು. ಚೀನಾದ ವಿಶ್ವವಿದ್ಯಾಲಯಗಳು ಈ ಚಲನಚಿತ್ರವನ್ನು ತಮ್ಮ ಪಾಠಸರಣಿ ಕಾರ್ಯದಲ್ಲಿಯೂ ತರಗತಿಗಳಲ್ಲಿ ಒಂದು ಬಗೆಯ ಒತ್ತಡ ಪರಿಹಾರವಾಗಿ ಸೂಚಿಸುತ್ತಿದ್ದರು. == ಟಿಪ್ಪಣಿಗಳು == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == – ಥ್ರೀ ಇಡಿಯಟ್ಸ್ @ ಐ ಎಮ್ ಡಿ ಬಿ ಟೆಂಪ್ಲೇಟು: ಥ್ರೀ ಇಡಿಯಟ್ಸ್ ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ಥ್ರೀ ಇಡಿಯಟ್ಸ್ ಥ್ರೀ ಇಡಿಯಟ್ಸ್ ಥ್ರೀ ಇಡಿಯಟ್ಸ್ ಟೆಂಪ್ಲೇಟು: